ಬಯಲು ವೇದಿಕೆ, ದೊಂದಿ ಬೆಳಕಲ್ಲಿ `ದುಶ್ಯಾಸನ ವಧೆ` !
ಲೇಖಕರು : ಉದಯವಾಣಿ
ಬುಧವಾರ, ಡಿಸೆ೦ಬರ್ 2 , 2015
|
ಡಿಸೆ೦ಬರ್ 2, 2015
|
ಬಯಲು ವೇದಿಕೆ, ದೊಂದಿ ಬೆಳಕಲ್ಲಿ `ದುಶ್ಯಾಸನ ವಧೆ` !
ಮಂಗಳೂರು :
ಯಕ್ಷಗಾನ ಕಲಾರಂಗ ಉಡುಪಿ, ಯಕ್ಷಧ್ವನಿ ಟ್ರಸ್ಟ್ ಮಂಗಳೂರು, ವಿಭಿನ್ನ ಮಂಗಳೂರು ಸಂಘಟನೆಗಳ ವತಿಯಿಂದ ಡಿ. 12ರಂದು ಸಂಜೆ 6ರಿಂದ ಬೊಂದೇಲ್ನ ಎಂಜಿಸಿ ವಿದ್ಯಾಸಂಸ್ಥೆಯ ಬಯಲು ರಂಗದಲ್ಲಿ "ದುಶ್ಯಾಸನ' ವಧೆ ಕಥಕ್ಕಳಿ-ಯಕ್ಷಗಾನಗಳ ಒಡನಾಟದ ವಿಶಿಷ್ಟ ಪ್ರದರ್ಶನ ನಡೆಯಲಿದೆ.
ಒಂದೇ ವೇದಿಕೆಯಲ್ಲಿ ವಿಶಿಷ್ಟವಾದ ದೊಂದಿ-ಮಂದ ಬೆಳಕಿನಲ್ಲಿ ಒಂದೇ ಕಥಾನಕವನ್ನು ದೇಶದ ಎರಡು ಮಹಾನ್ ಸೋದರ ಕಲೆಗಳು ಅಭಿನಯಿಸುವ ಚಾರಿತ್ರಿಕ ಕಲಾನುಭವ ಇದಾಗಲಿದೆ ಎಂದು ಸಂಘಟಕರು ಹೇಳಿದ್ದಾರೆ. ನಗರದೀಪಗಳ ಕೋರೈಸುವಿಕೆ-ಯಂತ್ರ ಸದ್ದುಗಳು ನುಸುಳದ;
ಕಣ್ಮನಗಳಿಗೆ ಆಪ್ತವಾಗುವ ಗಾಢ ಕತ್ತಲಿನ ಹಸಿರು ಮರಗಳ ಬಯಲಿನಲ್ಲಿ ರಾತ್ರಿ 12ರ ವರೆಗೆ ಈ ಪ್ರದರ್ಶನವಿದೆ.
ಸಂಜೆ 6ಕ್ಕೆ ದೊಂದಿ ಪ್ರಜ್ವಲನ; ಕಥಕ್ಕಳಿ-ಬಳಿಕ ಯಕ್ಷಗಾನದ ಪೂರ್ವ
ರಂಗದ ಸಾಂಪ್ರದಾಯಿಕ ಪ್ರದರ್ಶನ. ಬಳಿಕ ಅಂತಾರಾಷ್ಟ್ರೀಯ ಖ್ಯಾತಿಯ ಪದ್ಮಶ್ರೀ ಕಲಾಮಂಡಲಂ ಗೋಪಿ ಆಶಾನ್ ಅವರ ನೇತೃತ್ವದಲ್ಲಿ ಆಯ್ದ 22 ಪ್ರಬುದ್ಧ ಕಲಾವಿದರ ಬಳಗದಿಂದ ಕಥಕ್ಕಳಿ-ದುಶ್ಯಾಸನ ವಧಂ. ಅನಂತರ ಥಿಯೇಟರ್ ಯಕ್ಷ, ಉಡುಪಿ ಮತ್ತು ತೆಂಕುತಿಟ್ಟಿನ ಶ್ರೇಷ್ಠ ಆಯ್ದ ಕಲಾವಿದರ ತಂಡದಿಂದ ತೆಂಕುತಿಟ್ಟು ಯಕ್ಷಗಾನ-ದುಶ್ಯಾಸನ ವಧೆ. ಸಾಂಪ್ರದಾಯಕ "ದುಶ್ಯಾಸನ' ವಧೆಗೆ ಇಲ್ಲಿ ಹೊಸ ಯಕ್ಷ ರಂಗಕಲ್ಪನೆಯನ್ನು ಪೃಥ್ವೀರಾಜ್ ಕವತ್ತಾರ್ ಅವರ ಸೂತ್ರಧಾರತ್ವದಲ್ಲಿ ಸಂಯೋಜಿಸಲಾಗುತ್ತಿದೆ.
ಮಲೆಯಾಳದ ಕಥಕ್ಕಳಿ ಹಾಗೂ ಕನ್ನಡದ ತೆಂಕುತಿಟ್ಟು ಯಕ್ಷಗಾನ ಸುಮಾರು 450 ವರ್ಷಗಳ ಹಿಂದೆ; ಪಾರ್ತಿಸುಬ್ಬನ ಕಾಲದಿಂದಲೇ ಬೆಳೆದಿರಬಹುದು; ಈ ಸೋದರ ಕಲೆಗಳನ್ನು ಒಂದೇ ಕಥಾನಕದಲ್ಲಿ ಜೋಡಿಸುವ ಪ್ರಯತ್ನವಿದು ಎಂದು ವಿವರಿಸಲಾಗಿದೆ. ಇದನ್ನು ಅಭಯಸಿಂಹ ಅವರು ಅತ್ಯುನ್ನತ ತಂತ್ರಜ್ಞಾನದಲ್ಲಿ ಕಲೆಯ ಸಹಜ ಸೊಗಡಿಗೆ ಪೂರಕವಾಗಿ ದಾಖಲಿಸಿದ್ದಾರೆ.
ಕೃಪೆ :
udayavani
|
|
|